Monday, October 28, 2019

           ಮಕ್ಕಳ ಹಬ್ಬ

ನರಕಚತುರ್ದಶಿಯಂದು ಎಡನೀರು ಸಂಸ್ಥಾನದಲ್ಲಿ ಎಣ್ಣೆಹಬ್ಬ.
ಪ್ರಾತ:ಪೂಜೆ ಮುಗಿಸಿ ಬಂದ  ಶ್ರೀಮದೆಡನೀರು ಕೇಶವಾನಂದ ಭಾರತೀ ಸ್ವಾಮಿಗಳು, ಮಠದ ಮುಂಭಾಗದಲ್ಲಿ ಆಸೀನರಾಗುತ್ತಾರೆ .
ಮುಂಜಾವದ ಐದು ಗಂಟೆ ಆಸುಪಾಸಿನ ಮುಹೂರ್ತ.
ಊರ - ಪರವೂರ ಭಕ್ತಾದಿಗಳು ,ಕಲಾವಿದರು ಬಂದಿರುತ್ತಾರೆ - ಬರುತ್ತಾರೆ , ಬರುತ್ತಲೂ ಇರುತ್ತಾರೆ.

ನಮಸ್ಕರಿಸಿದ ಶಿಷ್ಯರು , ಹಾಸಿದ ಒಲಿಚಾಪೆಯ ಮೇಲೆ ಕುಳಿತುಕೊಳ್ಳಬೇಕು. ಬಾಗಿದ ತಲೆಗೆ ಮಂತ್ರಾಕ್ಷತೆ ಹಾಕಿದ ಶ್ರೀಪಾದಂಗಳು ಕೇಳುತ್ತಾರೆ -
ಎಳ್ಳೆಣ್ಣೆಯೋ
ತೆಂಗಿನೆಣ್ಣೆಯೋ
ಕಾಸಿದೆಣ್ಣೆಯೋ ...
ಶೀತ ಪ್ರಕೃತಿಯವರು ಕಾಸಿದೆಣ್ಣೆ ಬಯಸುತ್ತಾರೆ.
ಎತ್ತಿದ ಸೌಟಿನಿಂದ
ನೆತ್ತಿಗೆ ಎಣ್ಣೆಯ ಧಾರೆ ..
ಜೊತೆಗೆ ಒಬ್ಬರಿಗೊಂದು ಸಾಬೂನು.
ಹಾಸ್ಯ ವಿನೋದಗಳಿಂದ ಸನ್ನಿವೇಶ ರಸಮಯವಾಗುತ್ತದೆ.
ಬದುಕಿನ ಜಂಜಡ ಮರೆಸುತ್ತದೆ.

ಸ್ನಾನ ಮಾಡಿ ಬಂದು , ಪೂಜೆ ನೋಡಿ ಪ್ರಸಾದ ಸ್ವೀಕರಿಸಿದ ಮೇಲೆ . ಬೆಳಗಿನ ತಿಂಡಿ -
ದೋಸೆ , ಚಟ್ಣಿ ,ಬೆಲ್ಲದರವೆ , ವಡೆ , ಸಾಂಬಾರು , ಹಲುವ ,ಮೊಸರು , ಉಪ್ಪಿನಕಾಯಿ ...
ಹೊಟ್ಟೆತುಂಬ.
ಕೆಲವೊಮ್ಮೆ ಶ್ರೀಪಾದಂಗಳೇ ಬಂದು , ಒತ್ತಾಯದಿಂದ ದೋಸೆ ಹಾಕಿಸುವುದೂ ಉಂಟು .

ಸೌಟಿನಿಂದಿಳಿಯುವ ತೈಲಧಾರೆಗೆ ಹನ್ನೊಂದು ವರ್ಷಗಳಿಂದ ತಲೆಯೊಡ್ಡುತ್ತೇನೆ.
ಬಾಗಿ ಕುಳಿತು ಕಣ್ಣು ಮುಚ್ಚುತ್ತೇನೆ ...

ಆರುಮೆಟ್ಟಲಿನ ಎತ್ತರದ ಹಳೇಮನೆ .
ಬಾಗಿಲಿಗೆ ಒರಗಿ , ಕೈಯಲ್ಲಿ ಎಣ್ಣೆ ಕುಜುಳಿ ಹಿಡಿದ ಹೆಣ್ಣುಜೀವವೊಂದು ಕಾಣುತ್ತದೆ .
ಕರೆಯುವುದು ಕೇಳ್ತದೆ -

" ಎಣ್ಣೆಪಸೆ ಇಲ್ಲದೆ ಮೈ - ಕೈ ಎಲ್ಲಾ ಬೂದಿ ಕಾರ್ತದೆ .
ಬಾ ಗುಡ್ಡಾ ..
ಸ್ವಲ್ಪ ಎಣ್ಣೆ ಹಚ್ತೇನೆ .. "

" ನಂಗೆ ಎಣ್ಣೆ ಬೇಡಾ ... "
ಅವಳ ಕೈಗೆ ಸಿಗದೆ ಓಟ ಹೊಡೆಯುವ ಅವನಿಗೆ ಗೊತ್ತು - ಅಬ್ಬೆ ಪಾಪ .. ಅಟ್ಟಸಿಕೊಂಡು ಬರ್ಲಿಕ್ಕಿಲ್ಲ .

ಬಾಗಿ , ಕಣ್ಮುಚ್ಚಿ ಕುಳಿತ ಬೆಳೆದ ಮಗುವಿನ ನೆತ್ತಿಗೆ ಎಡನೀರು ಶ್ರೀಗಳು ಎಣ್ಣೆಹೊಯ್ಯುತ್ತಾರೆ.
ತಲೆಗೆರೆದ ಎಣ್ಣೆ - ಕೆಳಗೆ ಇಳಿಯದಿರುವುದಿಲ್ಲ!
ಮೈಯಿಡೀ ಹರಡಿಕೊಳ್ಳುತ್ತದೆ.

ಪನೆಯಾಲ ರವಿ
28- 10 - 2019

No comments:

Post a Comment