Thursday, July 26, 2018

      ‌                            ಗ್ರಹಣ
   
ಬಾವಲಿಹಾರದ,ಗಾಳಿಬೀಸದ, ತೆಂಗು ತೂಗದ ನಿಶ್ಚಲ ನಿಶೆ . ಟಿಟ್ಟಿಭ ಕೂಡ ಕೂಗದ, ನೀರವ ಮೌನ.
ಆ ರಾತ್ರಿ -
ಚಂದ್ರಗ್ರಹಣ .
ಕರೆಜರಿದ ಜಗಲಿಯಲ್ಲಿ ತಾಯಿ ಕೂತಿದ್ದಳು - ಪುತ್ರರೊಂದಿಗೆ. ಆಗಲೂ ಅವಳ ಕೈ ಸುಮ್ಮಗಿರದೆ , ಹಣ್ಣಡಿಕೆಯನ್ನು ಗೊನೆಯಿಂದ ಬೇರ್ಪಡಿಸುತ್ತಿತ್ತು. ಕೆಲಸವೇ ಅವಳ ಬದುಕು .ಮಕ್ಕಳ ಬಾಯಿ ಮುಚ್ಚಿರಲಿಲ್ಲ .ಅವರಿಗೆ ಬೇರೆ ಕೆಲಸವೂ ಇರಲಿಲ್ಲ.
     " ರಾಹುವಿನ ಕೈಗೆ ಸೋಲಾಗಲಿ..
        ಚಂದ್ರನ ಕೈ ಮೇಲಾಗಲಿ ..."
ಎಂಬ  ಮಂತ್ರವನ್ನು ತಾಯಿ ತಾನೂ ಪಠಿಸುತ್ತ , ಮಕ್ಕಳಲ್ಲೂ ಹೇಳಿಸುತ್ತಿದ್ದಳು.
       
ಅವರು ಚಂದಮಾಮನ ಬಿಡುಗಡೆಗಾಗಿ ಹಂಬಲಿಸುತ್ತಿದ್ದರು .ರಾಹು ಎಂಬ ಸರ್ಪ ತಿಂಗಳದೇವರನ್ನು ನುಂಗಿದರೆ ಗತಿಯೇನು ! ತಮ್ಮ ಮಂತ್ರಜಪ ಫಲಿಸುವ ಬಗ್ಗೆ ಅವರಿಗೇನೂ ಸಂದೇಹ ಇರಲಿಲ್ಲ .ಆದರೂ ಒಳಗಿಂದೊಳಗೆ ಸಣ್ಣ ಭೀತಿ. ಅಮ್ಮನಿಗೆ ಒತ್ತಿ ಕೂತು, ಆಗಾಗ ಮೇಲೆ ನೋಡುತ್ತಿದ್ದರು .

ಊಟ ಹೇಗೂ ಇಲ್ಲ - ಬಾನಿನಲ್ಲಿ ದೇವರು ಕಷ್ಟಪಡುವಾಗ ನಾವು ಉಣ್ಣಬಹುದೇ? ಇದ್ದ ಸ್ವಲ್ಪ ಮಜ್ಜಿಗೆಗೆ ತುಳಸಿಎಸಳು ಹಾಕಿ ಮುಚ್ಚಿಟ್ಟಾಗಿತ್ತು.
ಸಮಯ ಸರಿಯಿತು ..

ತಾಯಿಮಕ್ಕಳ ಮೇಲೆ..ಎದುರಿಗಿದ್ದ, ಸೆಗಣಿಸಾರಿಸಿದ ಅಂಗಳದ ಮೇಲೆ...ಎಲ್ಲೆಲ್ಲೂ - ಹಾಲಿನ ಮಳೆ!
ಹಾಲಿನಂಥಾ ಬೆಳದಿಂಗಳು .

ಪ್ರಾರ್ಥನೆ ಫಲಿಸಿತು .! ಗ್ರಹಣ ಮೋಕ್ಷ .

          ಕಾಲಾಂತರದಲ್ಲಿ ಅವಳು, ಕಾಲಕ್ಕೆ ಬಲಿಯಾದಳು.ಎಷ್ಟೋ
ಮೈಲುಗಳಾಚೆ ಇದ್ದ ,ಚಂದ್ರಮನ ಬಿಡುಗಡೆಗಾಗಿ ಹಂಬಲಿಸಿದಾಕೆಯನ್ನು ಕಾಲರಾಹು ನುಂಗಿಹಾಕಿತು . 
       ಬೆಳೆದ ದೇಹದ ಬಾಲರು ಈಗಲೂ ಕಾಯುತ್ತಿದ್ದಾರೆ..
ಕಾಳಸರ್ಪ ಬಿಟ್ಟುಕೊಡುವ ಅಬ್ಬೆಗಾಗಿ..
ತಮ್ಮ ಕೆನ್ನೆ ಸವರುತ್ತಿದ್ದ , ಕಠಿಣ ಕೆಲಸದಿಂದ ಒರಟಾದ ಹಸ್ತಗಳಿಗಾಗಿ. ಆ ಕೈಗಳ ಮೃದುತ್ವಕ್ಕಾಗಿ .

ಹಣ್ಣಡಿಕೆ ಘಮ ಬೀರುವ ಆ ಕೈಗಳಿಗಾ  ....

2 comments:

  1. ದೇವರೆ ದೇವರೇ ಅದ್ಭುತ ಬರಹ ಚಕ್ರವರ್ತಿ ರವಿಯಣ್ಣಾ.


    ಧರ್ಮದಲ್ಲಿ‌ ಯಮನ ಹಾಗೆ ನೀವೂ,

    ಒಂದು ಸಣ್ಣ ಸುಳಿವೂ ಇಲ್ಲದ ಸಾವು ಬಂದು ಓದುಗನ ಕಣ್ಣಮುಂದೆ ಅಜ್ಜಿಯ ಮಡಿಲಲ್ಲಿ ತಣ್ಣನೇ ಮಲಗಿತ್ತು.

    ReplyDelete