Sunday, August 16, 2020

ಸಂಕ್ರಮಣ .

   ಹೂಬಿಸಿಲು ಕಾಣುತ್ತದೆ.ಹದವಾದ ಗಾಳಿಗೆ ಹೂಬಳ್ಳಿಗಳು ತಲೆಯೆತ್ತುತ್ತಿವೆ.ದುಂಬಿ - ಜೇನ್ನೊಣ - ಹಕ್ಕಿಗಳ ಹಾಡು ಸಂಗೀತಮಯವಾಗಿದೆ. ಪ್ರಕೃತಿಗೇ ಉಲ್ಲಾಸ ಬಂದಿದೆ.
   ಹನಿಗಡಿಯದ ಮಳೆಯ , ಆಟಿಕತ್ತಲು ಕಳೆದು , ಸೋಣೇ ತಿಂಗಳು ಬಂದದ್ದೇ ಇದಕ್ಕೆ ಕಾರಣ. ಪ್ರಕೃತಿರಂಗ ಬದಲಾದಂತೆ  ಜನಜೀವನವೂ ಸಂಭ್ರಮಿಸುತ್ತದೆ ....
     ಮನೆಯ ಮುತ್ತೈದೆ ಮುಂಜಾವದಲ್ಲಿ ಮಿಂದು, ದೇವರಕೋಣೆ ಹೊಕ್ಕು, ಹೊರಮುಖವಾಗಿ ಕುಳಿತು ಹೊಸ್ತಿಲು ತೊಳೆಯುತ್ತಾಳೆ.ತಲೆಮಾರು ದಾಟಿ ಬಂದ ಗೆರಟೆಯಲ್ಲಿ ಕದಡಿಟ್ಟ ಸೇಡಿಹುಡಿಗೆ ನೀರು ಬೆರೆಸಿ ಹದ ಮಾಡುತ್ತಾಳೆ. ನೆಣೆವಸ್ತ್ರದಿಂದ ಮಾಡಿದ ಬತ್ತಿಯನ್ನು ಅದಕ್ಕೆ ಅದ್ದಿ , ಹೊಸ್ತಿಲಿಗೆ ಬರೆಯುತ್ತಾಳೆ.
    ನಿಶ್ಚಿತ ವಿನ್ಯಾಸಗಳಿಂದ ಅಲಂಕರಿಸಿದ ಹೊಸಿಲಿನ ಮೇಲೆ ಗಂಧಾಕ್ಷತೆಗಳನ್ನಿಟ್ಟು , ನೀರುಕಡ್ಡಿ ,ಕೆರೆಮಣೆ ಹೂವುಗಳಿಂದ ಪೂಜಿಸುತ್ತಾಳೆ. ಮುನ್ನಾದಿನವೇ ಸುಟ್ಟು - ಹುರಿದು , ಸುಲಿದಿಟ್ಟ ಹಲಸಿನ ಬೇಳೆ - ಗೇರುಬೀಜಗಳನ್ನೂ , ಒಂದು ಗಿಂಡಿ ನೀರನ್ನೂ ಇಟ್ಟು ನಮಸ್ಕರಿಸುತ್ತಾಳೆ.
           ತಾನು ಹೊಕ್ಕ ಮನೆ - ತನ್ನ ಮನೆ - ಸೌಭಾಗ್ಯ ಸ್ಥಿರವಾಗಲಿ.
     ಮನೆಯ ಇನ್ನುಳಿದವರು ಇವಳು ಏಳುವುದನ್ನೇ ಕಾಯುತ್ತಾರೆ ... ಗಮಗಮಿಸುವ ಗೇರುಬೀಜ , ಬೇಳೆಗಳನ್ನು ಲಪಟಾಯಿಸಬೇಕಲ್ಲ !
     ನಿತ್ಯ ಹೊಸ್ತಿಲಿಗೆ ಬರೆದು ಕೈ ಮುಗಿಯಬೇಕು. ಮನೆಯ ಗೃಹಿಣಿಗೆ ಮಾಡಿ ಮುಗಿಯದಷ್ಟು ಕೆಲಸ ಉಂಟಲ್ಲ . ಹಾಗಾಗಿ ಸಿಂಹ ಮಾಸದಲ್ಲಿ ಕಡ್ಡಾಯ.
     
         ಅಬ್ಬೆಯೂ ಇದನ್ನು ಆಚರಿಸುತ್ತಿದ್ದರು. ಮಾತ್ರವಲ್ಲದೆ  ತಿಂಗಳಿಗೆ ನಾಲ್ಕು ದಿನ ಯಾರನ್ನೂ ಮುಟ್ಟಿಸಿಕೊಳ್ಳದೆ , ದೂರ ಮಲಗುತ್ತಿದ್ದಳು.
  ಕುತೂಹಲದ ಪ್ರಶ್ನೆಗೆ ಸಿದ್ಧ ಉತ್ತರವೂ ಇತ್ತು .. 
ಅವಳನ್ನು ಕಾಗೆ ಮುಟ್ಟಿದೆ. ಹತ್ತಿರ ಹೋದರೆ ಸ್ನಾನ ಮಾಡಲೇ ಬೇಕು .
ಆ ದಿನಗಳಲ್ಲಿ ಹಿರಿಯಕ್ಕನದ್ದೇ ಅಡುಗೆ.
 ಅಪ್ಪ- ಅಣ್ಣಂದಿರಿಗೆ ಹಿತವಾಗುವಂತೆ , ತಮ್ಮ - ತಂಗಿಯರಿಗೆ ಇಷ್ಟ ಆಗುವಂತೆ ಸುಧಾರಿಸುವುದೇನು ಸುಲಭವೇ ? ಮನೆಯೊಂದು ರಣರಂಗ !
  ಐದನೇ ದಿನ ಇದಕ್ಕೆಲ್ಲ ಕೊನೆ - 
ನಸುಕಿನಲ್ಲಿ ಮಕ್ಕಳು ಎದ್ದೇಳುವಾಗಲೇ ಅಮ್ಮ ಕೆರೆಯಿಂದ ಬರುತ್ತಿರುತ್ತಾಳೆ.
    ಸ್ನಾನ ಮುಗಿಸಿ ತಲೆಗೆ ಕಟ್ಟಿದ್ದಾಳೆ . ಮಿಕ್ಕುಳಿದ ಕೂದಲಿನಲ್ಲಿ , ಗೊಂಪು ಹಾಕಿದ ಎರಪ್ಪೇ ಸೊಪ್ಪಿನ ಚೂರು ಸಿಕ್ಕಿ ನೇತಾಡುತ್ತಿದೆ. ತುಂಡು ಸೀರೆಯುಟ್ಟವಳ ಒಂದು ಕೈಯಲ್ಲಿ ಚೆಂಬು ಗ್ಲಾಸು .ಇನ್ನೊಂದು ತೋಳಿನಲ್ಲಿ - ತೊಳೆದು ನೀರಿಳಿಯುತ್ತಿರುವ  ಕಂಬಳಿ , ಹೊದಿಕೆ , ಚಾಪೆ ,ಸೀರೆಗಳಿವೆ .
   ನಾಕೈದು ದಿನ ದೂರವಿದ್ದ ಮಕ್ಕಳು , ಅಬ್ಬೆಯನ್ನು ಮೊದಲು ಮುಟ್ಟುವುದು , ನಾನು - ತಾನೆಂದು ಓಡುತ್ತವೆ.
ಅವರನ್ನು ಸುಧಾರಿಸಿಕೊಂಡು ದೇವರೊಳ  ಹೊಕ್ಕ ಅಮ್ಮ , ಹೊಸ್ತಿಲಿಗೆ ಬರೆದು - ಅಡ್ಡಬಿದ್ದು , ಹಣೆಗಿರಿಸಿಕೊಂಡು ಹೊರಬರುತ್ತಾಳೆ...   
           
           ತೇಯ್ದು ಹಚ್ಚಿದ ಹಸೀ ಅರಸಿನ , ಹುಬ್ಬಿನ ಮಧ್ಯೆ - ಹೊಳೆವ ಕುಂಕುಮ , ತಿಂಗಳಬೆಳಕಿನಂಥಾ ಮುಗುಳ್ನಗೆಯಿಂದ ಬೆಳಗುವ ದುಂಡು ಮುಖ ....
  ಮಕ್ಕಳ ತಾಯಿ ಪುನಃ ಅಟ್ಟುಂಬೊಳವನ್ನು ಹೊಗುತ್ತಾಳೆ.

  ಕಡುಕಷ್ಟದ ಕರ್ಕಾಟಕ ಕಳೆದು , ಸುಭಿಕ್ಷದ ಸಿಂಹಮಾಸ ತೊಡಗುತ್ತದೆ .
             ಈಗಿನ ಹೆಮ್ಮಕ್ಕಳನ್ನು ಕಾಗೆ ಮುಟ್ಟುವುದಿಲ್ಲ.
             ಡೋರ್- ಬಾಗಿಲಿನ ಮನೆಗೆ ಹೊಸ್ತಿಲೂ ಇಲ್ಲ.

       ಪನೆಯಾಲ ರವಿರಾಜ
       16 - 8 - 2020

Wednesday, August 12, 2020

ಸ್ವಗತ ...

         

       ' ಲಾಕ್ ಡೌನ್ ' 
ಹುಟ್ಟಿದಾರಭ್ಯ ಕೇಳದ ಪದ ! ಸ್ವಗೃಹದಲ್ಲಿ ಸ್ವಯಂ ಬಂಧನ.  ಹೊಣೆಯರಿತು ಒಡ್ಡಿಕೊಳ್ಳಬೇಕಾದ ಸೆರೆವಾಸ.
    ಮಾರ್ಚ್ ೬ / ೭ ನನ್ನಣ್ಣನ ವರ್ಷಾಂತ. ಅವ ತೀರಿಕೊಂಡು ಒಂದು ವರ್ಷ ಆಯ್ತು.
ಹೋಗಲೇ ಬೇಕು ..
ಸರಿ.
ಹೋಗುವುದು ಹೇಗೆ ?
ಈಗ ನನ್ನ ವಸತಿ ಕರ್ನಾಟಕದಲ್ಲಿ . ಹೋಗಬೇಕಾದ್ದು ಕೇರಳದ ಪನೆಯಾಲಕ್ಕೆ .ಕೇರಳ ಕರ್ನಾಟಕದ ಗಡಿ ಮುಚ್ಚಿದೆ , ಪೋಲೀಸ್ ಪಹರೆ ಇದೆ . ದಾಟುವಂತಿಲ್ಲ.
  ಪರಿಚಿತ ಪೋಲೀಸೊಬ್ಬರಿಗೆ ಫೋನ್ ಮಾಡಿ ಕೇಳಿದೆ -
" ಯಾವ ಕಾರಣಕ್ಕೂ ಬಿಡುವಂತಿಲ್ಲ ಸರ್,
 ಮತ್ತೆ - ನಿಮಗೆ ಧೈರ್ಯ ಇದ್ರೆ -  ಕಾಡದಾರಿ ಅಲ್ವಾ , ೪ ಕಿಮೀ ನಡೆದು ಹೋಗಿ ಬಿಡಿ , ನೀವೆಂತ ಅಪಾಯಕಾರಿ ಅಲ್ವಲ್ಲ."
  ಆಸೆ ಹುಟ್ಟಿತು .. ಅಣ್ಣನ ದಿನದಲ್ಲಿ ಪಾಲ್ಗೊಳ್ಳಬಹುದು , ಅತ್ತಿಗೆಯ ಕಾಲಿಗೆ ಬೀಳಬಹುದು , ಅಣ್ಣನ ಮಕ್ಕಳ ತಲೆಗೆರಡು ಅಕ್ಷತೆ ಹಾಕಬಹುದು ...
      ಆದರೆ ಅತಿಕ್ರಮಣ ...
ದೇಶಕ್ಕೆ ಬಂದ  ಆಪತ್ತನ್ನು ಇದಿರಿಸುವುದಕ್ಕಾಗಿ, ಆಳುವ ಪ್ರಭು ಮಾಡಿದ ದಿಗ್ಬಂಧ. ಉಲ್ಲಂಘಿಸಬಹುದೇ ?
      ಇಲ್ಲ ನಾನು ಹೋಗಲಿಲ್ಲ ..
ಎಳವೆಯಿಂದ ನನ್ನನ್ನು ಪೋಷಿಸಿ ಬೆಳೆಸಿದ, ನನ್ನಣ್ಣನ ತಿಥಿಕಾರ್ಯಗಳಿಗೆ ನಾನು ಹೋಗದೇ ಉಳಿದೆ.

ನಾನು ಶ್ರೀಕಟೀಲು ಮೇಳದ ಕಸುಬುಧಾರಿ.
  ಹಿಮ್ಮೇಳವಿರಲಿ ಮುಮ್ಮೇಳವಿರಲಿ - ಝಗಮಗಿಸುವ ರಂಗವೇರಿದರೆ ಒಂದು ಭ್ರಾಂತಿ ಆವರಿಸುವುದಿದೆ .ತಾನು ನಿರ್ವಹಿಸುವ ಪೌರಾಣಿಕ ಪಾತ್ರಗಳ ಗುಂಗು , ಹಗಲಾದರೂ ಇಳಿಯದೆ ,ಹಾದಿಗೆಡಿಸುವ ಅಮಲು ಅದು.! ಆ ವಿಷ ಬೀಜಕ್ಕೆ ಈಗಿನ ಕೆಲವು ವಾಟ್ಸೇಪ್ ಕಲಾಭಿಮಾನಿಗಳು, ನೀರುಣಿಸುತ್ತಲೂ ಇರುತ್ತಾರೆ.
ಸ್ಟೇಜಿನ ಮುಂದಿರುವವರೆಲ್ಲ ನನ್ನ ಆರಾಧಕರು , ಇತರ ನರಮನುಷ್ಯರಿಗಿಂತ ತಾನೇ ಶ್ರೇಷ್ಠನೆಂದು ತಲೆಯೆತ್ತಿ ನಡೆಯುತ್ತಿದ್ದೆ ...
   ವೈರಾಣುವೊಂದು ಧುತ್ತನೆ ಮುಂದೆ ನಿಂದು ಅಬ್ಬರಿಸಿತು .ನೀನಿಷ್ಟೇ ಎಂದು ಬೆಟ್ಟುಮಾಡಿ ತೋರಿಸಿತು! ಭೂಪತಿ,ಸುರಪತಿ,ಅಸುರಪತಿಗಳೆಂಬ ಕೋವಿದರೆಲ್ಲ ಕೋವಿಡ್ ೧೯ ರ ಮುಂದೆ ಮಂಡಿಯೂರಿದರು !
ಭವಿಷ್ಯದ ಪ್ರಶ್ನೆಯೇ ಭೂತವಾಗಿ ಕಂಗೆಡಿಸಿತು.ಎಲ್ಲ ಕ್ಷೇತ್ರಗಳೂ ಒದ್ದಾಡಿದವು.ಬಡವನೊಂದಿಗೆ ಬಲ್ಲಿದನೂ.
     ನಾನು - ತಾನೆಂಬುದೆಲ್ಲ ಎಷ್ಟು ದುರ್ಬಲ ವಾಚಕ !

ನಿನ್ನೆಯ ಆಟಮುಗಿಸಿ ಬರುವಾಗ ಇವತ್ತಿನ ಆಟ ಇರಲಾರದೆಂಬ ನಿರ್ಣಯ ನಮಗಿರಲಿಲ್ಲ.ಮತ್ತೆ ಚೌಕಿ ಸೇರಲಿಲ್ಲ. ಬಹುವಾಗಿ ಪ್ರೀತಿಸುವ ರಂಗವನ್ನು ಹೊಗಲಿಲ್ಲ. 
ಸಹಕಲಾವಿದರಿಗೆ ವಿದಾಯಕೋರದೆ ,ಪತ್ತನಾಜೆಸೇವೆಯಂದು ಗೆಜ್ಜೆ ಬಿಚ್ಚಿ , ದೇವರ ಮುಂದಿಟ್ಟು ನಮಸ್ಕರಿಸದೆಯೇ ಬಹುಶ: ಈ ವರ್ಷದ ತಿರುಗಾಟವೇ ಮುಗಿದು ಹೋಗುತ್ತದೆ .

ನಾನು ಆಟಕ್ಕೆ ಹೋಗದೆ , ಮಗ ಪಾಠಕ್ಕೆ ಹೋಗದೆ -ಪೇಟೆಯ ಮುಖ ಕಾಣದೆ ಎರಡು ತಿಂಗಳಾಯಿತು !ತಲೆಗೂದಲು ಬೆಳೆದು ಮುಸುವನ ಹಾಗಾಗಿದೆ ! ಸ್ವಯಂ ಕೇಶಕರ್ತನ ಮಾಡುವ ಚಿತ್ರಗಳನ್ನು ನೋಡಿದ್ದೆ . ಧೈರ್ಯ ಬರಲಿಲ್ಲ .ನಮ್ಮೂರಲ್ಲೇ ಒಬ್ಬ ಹಜಾಮ ಇದ್ದಾನೆ ,ಮನೆಗೆ ಬಂದ ಸುರಕ್ಷಿತ - ಪರಿಚಿತರಿಗೆ ಕರ್ತನಸೇವೆ ಮಾಡುತ್ತಿದ್ದಾನೆಂದು ತಿಳಿಯಿತು.
   ಹೋಗೋಣವೇ .? ಸರಕಾರೀ ನಿಯಮ ಪ್ರಕಾರ ಹೋಗಕೂಡದು.
    ಬಿಎ ಪದವೀಧರನಾಗಿ,ಹವ್ಯಾಸಿ ಯಕ್ಷಗಾನ ಕಲಾವಿದನಾಗಿ,ನೇಪಥ್ಯಸಹಾಯಕನಾಗಿ ದುಡಿಯುವ ಆತನಿಗೆ ೬೦ ರ ಹರೆಯ. ಆಟ ಇಲ್ಲದೆ , ಕುಲಕಸುಬು ಮಾಡಲಾಗದ ಈ ಕಾಲದಲ್ಲಿ , ನಮ್ಮಿಬ್ಬರ ತಲೆಕೊಟ್ಟರೆ ಅವನ ನಾಲ್ಕು ದಿನದ ಖರ್ಚಿಗಾದೀತಲ್ಲವೇ ?
      ಹೋದೆವು .
" ನೀರುಮಾತ್ರ ಕೆಳಗಿಂದ ಹೊತ್ತು ತರ್ಬೇಕು ಬೇರೆ ತಾಪತ್ರಯ ಏನಿಲ್ಲ " ಎನ್ನುತ್ತಾ ನಮ್ಮನ್ನು ಸ್ವಾಗತಿಸಿದ.

ಚಿಕ್ಕ ಮನೆಯ ಪುಟ್ಟ ಅಂಗಳವೇ ಸೆಲೂನು.ನಾವು  ಕೊಂಡೊಯ್ದ ಬಟ್ಟೆಯನ್ನೇ ಹೊದೆಸಿ,ಕೂದಲು ಕತ್ತರಿಸಿ
ನಮ್ಮನ್ನು ಚಂದ ಮಾಡಿಬಿಟ್ಟ !

ಸಣ್ಣ ಮೊತ್ತವೊಂದನ್ನು ಅವನ ಕೈಯಲ್ಲಿಟ್ಟೆ . ನನ್ನಲ್ಲಿ ಇದೆ - ನಾನು ದಾತಾರ , ಎಂದು ಬಿಚ್ಚಬಹುದಾದ ನನ್ನ ಭಾವದ ಹೆಡೆಯನ್ನು ಮೆಟ್ಟಿ ನಿಂತಿದ್ದೆ.
ಸಂತೋಷದಿಂದ - ತನ್ನ ಕುಲವೃತ್ತಿಗೆ ಸಂದ ಪ್ರತಿಫಲ ಇದು , ಎಂಬ ಸ್ವಾಭಿಮಾನ ತಂದ ಸಂತಸದಿಂದ ಸ್ವೀಕರಿಸಿದ. ಎಣಿಸಿಯೂ ನೋಡದೆ ಒಳಗಿಟ್ಟ !
      ದೀನ ಯಾರು - ದಾನಿ ಯಾರು !
   ಹಗುರಾದ ತಲೆಯೊಂದಿಗೆ ಮನೆ ಸೇರಿದೆವು .

ಕೊರೋನ ತಂದ ದುರಂತ ಅಸಹನೀಯವಾದುದು 
ನಿಜ. ಅದನ್ನು ಗೆಲ್ಲಬೇಕಾದರೆ ಲಾಕ್ ಡೌನ್ ಅತ್ಯಗತ್ಯ. ತತ್ಪರಿಣಾಮಗಳು ಅನಿವಾರ್ಯ.

ಆದರೆ - 
ವಿಜೃಂಭಣೆಯ ಸಮಾರಂಭಗಳು
ಅನವಶ್ಯಕ ತಿರುಗಾಟ - ವಿಹಾರಗಳು
ಒಮ್ಮೆ ಬಾಯಾರಿದರೆ ಒಂದು ಕುಪ್ಪಿ ನೀರು ಎಂಬ ಪ್ರವೃತ್ತಿ
ಫಾಸ್ಟ್ ಫುಡ್ ವ್ಯಾಮೋಹ
ವಿನೋದದ ವಾಹನಯಾತ್ರೆಗಳು
ಮದ್ಯಪಾನ  ...
ಎಲ್ಲವೂ ಸೀಲ್ ಡೌನ್ ಆಗಿದೆ !

ಓಝೋನ್ ರಂದ್ರ ಮುಚ್ಚುತ್ತಿದೆ .. ಗಂಗೆ ತನ್ನ ಪಾಪವನ್ನು ತಾನೇ ತೊಳೆದು ಕೊಳ್ಳುತ್ತಿದ್ದಾಳೆ ...ಪರಿಸರ ಅಮಲಿನವಾಗುತ್ತಿದೆ !
ಇದು ಪ್ರಕೃತಿ ನಮಗೆ ನೀಡಿದ ಎಚ್ಚರಿಕೆ .
ನಿಸರ್ಗ ವ್ಯಗ್ರವಾದರೆ - ಮಾನವ ಒಬ್ಬಂಟಿ, ಅಸಹಾಯಕ .
ವರ್ಷದಲ್ಲಿ ಒಂದು ತಿಂಗಳಾದರೂ ದೇಶವಾಸಿಗಳೆಲ್ಲ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಆಚರಿಸುವುದು ವಿಹಿತ.
             ನಿಸರ್ಗವನ್ನು ಬೆಲೆವೆಣ್ಣಿನಂತೆ ಬಳಸದೆ,
             ಹೆತ್ತಬ್ಬೆಯಂತೆ ಗೌರವಿಸೋಣ.
ದೇಶ ಕ್ಷೋಭರಹಿತವಾಗಲಿ .
         ‌ನಮಸ್ಕಾರ .


ಪನೆಯಾಲ ರವಿರಾಜ.
ಜೋಗಿಮೂಲೆ ಮನೆ
12-8-2020

Thursday, August 6, 2020

ಪ್ರಶ್ನೆ ...

                           
                
ಈಗ ಚಿಮಿಣಿ ಎಣ್ಣೆ ಸಿಗುವುದಿಲ್ಲ.ಡೀಸೆಲ್ ದೀಪದ ಹೊಗೆಕಾರುವ ಬೆಳಕಿನಲ್ಲಿ ಬೀಡಿಕಟ್ಟಿ ಮಲಗುವಾಗ ನಡುರಾತ್ರೆ ಆಗ್ತದೆ.
  ಬೆಳಗ್ಗೆ ಮೂರೂವರೆಗೆ ಎದ್ದು ಪುನ: ಬೀಡಿಯ ಕೆಲಸ.ಏಳು - ಒಂಭತ್ತು ವರ್ಷದ ಇಬ್ಬರು ಗಂಡು ಮಕ್ಕಳಿಗೆ , ಗಂಡನಿಗೆ , ತನಗೆ ಬೆಳಗಿನ ತಿಂಡಿ ಮಾಡಿಕೊಳ್ಳಬೇಕು .
  ಮಧ್ಯಾಹ್ನ ಊಟಕ್ಕೆ ಗಂಜಿ - ಚಟ್ಣಿಯೋ ಪಲ್ಯವೋ ಸಿದ್ದ ಆಗಬೇಕು.
  ಬಾಕಿ ಮನೆಗೆಲಸ ,ಸೊಸೈಟಿ - ಅಂಗಡಿ ಜೊತೆಗೆ ಬೀಡಿ ಎಲೆ ಕತ್ತರಿಸಿಕೊಳ್ಳಬೇಕು. 
ಗಂಡ ಕೆಲಸಕ್ಕೆ ಹೋದರೆ ಹೋದ.ಏನಾದರೂ ತಂದರೆ ತಂದ.
 ಕುಡಿದು ಬಂದರೆ ಅವ ದುರ್ವಾಸ .
     ಇಬ್ಬರು ಮಕ್ಕಳೂ ಸುಮ್ಮಗಿರುವವರಲ್ಲ. ಮನೆಯ ಸುತ್ತ ಕಾಡಿನಲ್ಲಿ-
 ನೆಡುವುದು - ಕಡಿಯುವುದು - ಮೀಯುವುದು - ಜಾರುವುದು - ಏರುವುದು  ... ಅವರ ಮೇಲೆ ಸದಾ ತಾಯಿ ಕಣ್ಣು ಇರಲೇಬೇಕು.
  ಹೀಗೆ ಬದುಕಾಟ ಮಾಡುವ ಹೆಣ್ಣೊಬ್ಬಳು, ನಮ್ಮೂರಲ್ಲಿ ಇದ್ದಾಳೆ.ಬದುಕಿನ ಏಕತಾನತೆಯಿಂದ ಬೇಸತ್ತು, ನಮ್ಮಲ್ಲಿಗೆ ಒಮ್ಮೊಮ್ಮೆ ಬರುತ್ತಾಳೆ.
 ದನಗಳಿಗೆ ಹುಲ್ಲು ,ಚೂರುಪಾರು ಮನೆಗೆಲಸಗಳನ್ನು ಮಾಡಿ - ಮಾತಾಡಿ, ಹೊಟ್ಟೆತುಂಬ ಉಂಡು ಹೋಗುತ್ತಾಳೆ.
  ಮಕ್ಕಳೂ ಅಷ್ಟೇ - ಒಂದು ಪೇರಳೆ ಸಿಕ್ಕಿದರೆ ಮೂರು ತುಂಡು ಮಾಡುತ್ತವೆ.

 ಮೊನ್ನೆ - 
" ಮೊಬೈಲು ತೆಗೆಯಲು ಲೋನು ಸಿಗ್ತದಾ ಅಣ್ಣೇರೇ " ಅಂತ ನನ್ನಲ್ಲಿ ಕೇಳಿದಳು !
 ಓನ್ ಲೈನ್ ತರಗತಿಗಾಗಿ .ಕಂದಮ್ಮಗಳು ವಿದ್ಯಾವಂತರಾಗುವುದು ಅವಳ ಕನಸು .
  ಅಮೆಝಾನ್ ,ಪ್ಲಿಪ್ಕಾರ್ಟ್ , ಇ ಎಮ್ ಐ .. ಎಲ್ಲ ಉಂಟಲ್ಲ . ಆದರೆ ಅದು, ದುಡ್ಡಿದ್ದವರಿಗಾಗಿ ಮಾತ್ರ.
ಸ್ಮಾರ್ಟ್ ಫೋನಿಗೆ ಬೇಕು ಆರೇಳು ಸಾವಿರ.
     ನಾನೇನು ಅನುಕೂಲಸ್ಥನೇ! ಆದರೂ ,ಹಳತಾದರೂ ಒಂದು ಕೊಡಿಸಿದರೆ ?
  ಕರೆಂಟಿಲ್ಲದ ಮನೆ. 
ಮೊಬೈಲು ಚಾರ್ಜು ಮಾಡುವದು ಹೇಗೆ ?
ನೆಟ್ ಒಫರ್ ಹಾಕುವುದಕ್ಕೂ ಬೇಕಲ್ಲ ಒಂದು ಮೊತ್ತ ?
   ಊರಶಾಲೆಯ ಟೀಚರ್, ದಾರಿಯಲ್ಲಿ ಕಾಣಸಿಕ್ಕಿದರೂ ನೋಟ್ಸ್ ಕೊಡುವುದಿಲ್ಲ - ಸರಕಾರದ ಆದೇಶವೇ ಹಾಗಿದೆ . ಓನ್ ಲೈನ್ ತರಗತಿಯ ಓನ್ ಲೈನ್ ದಾಖಲಾತಿ ಬೇಕು .
        ಇನ್ನು ಹೇಗೆ ?
                                            -ಪನೆಯಾಲರವಿರಾಜ.