ಇದೊಂದು ನೋಟ..
Sunday, August 16, 2020
ಸಂಕ್ರಮಣ .
Wednesday, August 12, 2020
ಸ್ವಗತ ...
Thursday, August 6, 2020
ಪ್ರಶ್ನೆ ...
Monday, October 28, 2019
ನರಕಚತುರ್ದಶಿಯಂದು ಎಡನೀರು ಸಂಸ್ಥಾನದಲ್ಲಿ ಎಣ್ಣೆಹಬ್ಬ.
ಪ್ರಾತ:ಪೂಜೆ ಮುಗಿಸಿ ಬಂದ ಶ್ರೀಮದೆಡನೀರು ಕೇಶವಾನಂದ ಭಾರತೀ ಸ್ವಾಮಿಗಳು, ಮಠದ ಮುಂಭಾಗದಲ್ಲಿ ಆಸೀನರಾಗುತ್ತಾರೆ .
ಮುಂಜಾವದ ಐದು ಗಂಟೆ ಆಸುಪಾಸಿನ ಮುಹೂರ್ತ.
ಊರ - ಪರವೂರ ಭಕ್ತಾದಿಗಳು ,ಕಲಾವಿದರು ಬಂದಿರುತ್ತಾರೆ - ಬರುತ್ತಾರೆ , ಬರುತ್ತಲೂ ಇರುತ್ತಾರೆ.
ನಮಸ್ಕರಿಸಿದ ಶಿಷ್ಯರು , ಹಾಸಿದ ಒಲಿಚಾಪೆಯ ಮೇಲೆ ಕುಳಿತುಕೊಳ್ಳಬೇಕು. ಬಾಗಿದ ತಲೆಗೆ ಮಂತ್ರಾಕ್ಷತೆ ಹಾಕಿದ ಶ್ರೀಪಾದಂಗಳು ಕೇಳುತ್ತಾರೆ -
ಎಳ್ಳೆಣ್ಣೆಯೋ
ತೆಂಗಿನೆಣ್ಣೆಯೋ
ಕಾಸಿದೆಣ್ಣೆಯೋ ...
ಶೀತ ಪ್ರಕೃತಿಯವರು ಕಾಸಿದೆಣ್ಣೆ ಬಯಸುತ್ತಾರೆ.
ಎತ್ತಿದ ಸೌಟಿನಿಂದ
ನೆತ್ತಿಗೆ ಎಣ್ಣೆಯ ಧಾರೆ ..
ಜೊತೆಗೆ ಒಬ್ಬರಿಗೊಂದು ಸಾಬೂನು.
ಹಾಸ್ಯ ವಿನೋದಗಳಿಂದ ಸನ್ನಿವೇಶ ರಸಮಯವಾಗುತ್ತದೆ.
ಬದುಕಿನ ಜಂಜಡ ಮರೆಸುತ್ತದೆ.
ಸ್ನಾನ ಮಾಡಿ ಬಂದು , ಪೂಜೆ ನೋಡಿ ಪ್ರಸಾದ ಸ್ವೀಕರಿಸಿದ ಮೇಲೆ . ಬೆಳಗಿನ ತಿಂಡಿ -
ದೋಸೆ , ಚಟ್ಣಿ ,ಬೆಲ್ಲದರವೆ , ವಡೆ , ಸಾಂಬಾರು , ಹಲುವ ,ಮೊಸರು , ಉಪ್ಪಿನಕಾಯಿ ...
ಹೊಟ್ಟೆತುಂಬ.
ಕೆಲವೊಮ್ಮೆ ಶ್ರೀಪಾದಂಗಳೇ ಬಂದು , ಒತ್ತಾಯದಿಂದ ದೋಸೆ ಹಾಕಿಸುವುದೂ ಉಂಟು .
ಸೌಟಿನಿಂದಿಳಿಯುವ ತೈಲಧಾರೆಗೆ ಹನ್ನೊಂದು ವರ್ಷಗಳಿಂದ ತಲೆಯೊಡ್ಡುತ್ತೇನೆ.
ಬಾಗಿ ಕುಳಿತು ಕಣ್ಣು ಮುಚ್ಚುತ್ತೇನೆ ...
ಆರುಮೆಟ್ಟಲಿನ ಎತ್ತರದ ಹಳೇಮನೆ .
ಬಾಗಿಲಿಗೆ ಒರಗಿ , ಕೈಯಲ್ಲಿ ಎಣ್ಣೆ ಕುಜುಳಿ ಹಿಡಿದ ಹೆಣ್ಣುಜೀವವೊಂದು ಕಾಣುತ್ತದೆ .
ಕರೆಯುವುದು ಕೇಳ್ತದೆ -
" ಎಣ್ಣೆಪಸೆ ಇಲ್ಲದೆ ಮೈ - ಕೈ ಎಲ್ಲಾ ಬೂದಿ ಕಾರ್ತದೆ .
ಬಾ ಗುಡ್ಡಾ ..
ಸ್ವಲ್ಪ ಎಣ್ಣೆ ಹಚ್ತೇನೆ .. "
" ನಂಗೆ ಎಣ್ಣೆ ಬೇಡಾ ... "
ಅವಳ ಕೈಗೆ ಸಿಗದೆ ಓಟ ಹೊಡೆಯುವ ಅವನಿಗೆ ಗೊತ್ತು - ಅಬ್ಬೆ ಪಾಪ .. ಅಟ್ಟಸಿಕೊಂಡು ಬರ್ಲಿಕ್ಕಿಲ್ಲ .
ಬಾಗಿ , ಕಣ್ಮುಚ್ಚಿ ಕುಳಿತ ಬೆಳೆದ ಮಗುವಿನ ನೆತ್ತಿಗೆ ಎಡನೀರು ಶ್ರೀಗಳು ಎಣ್ಣೆಹೊಯ್ಯುತ್ತಾರೆ.
ತಲೆಗೆರೆದ ಎಣ್ಣೆ - ಕೆಳಗೆ ಇಳಿಯದಿರುವುದಿಲ್ಲ!
ಮೈಯಿಡೀ ಹರಡಿಕೊಳ್ಳುತ್ತದೆ.
ಪನೆಯಾಲ ರವಿ
28- 10 - 2019
Friday, October 4, 2019
ಗಾನಕೋಗಿಲೆಯೊಡನೆ ಸ್ವಗತ .
ಪಡಿಮಂಚವನ್ನೇರಿದರೆ ರಂಗವನ್ನೆಲ್ಲ ಆವರಿಸುವ, ಗಂಭೀರ ಸ್ವಭಾವ - ಸೌಷ್ಟವ - ಶಾರೀರ..
ಮುಮ್ಮೇಳದತ್ತ ಸದಾ ನೆಟ್ಟಿರುವ ದೃಷ್ಟಿ ಸೂಕ್ಷ್ಮತೆ ..
ರಂಗದಲ್ಲಿರುವಾಗ ಚೆಲ್ಲಾಟ - ಪಟ್ಟಾಂಗಗಳಿಲ್ಲದ ಸ್ಥಾನ ಪ್ರಜ್ಞೆ ..
ವ್ಯಂಗ್ಯ ವಿನೋದ , ಹಾಸ್ಯ ವಿಡಂಬನೆಗಳನ್ನು ತಾನೊಂದಾಗಿ ಸವಿಯುವ , ಕೆಲವೊಮ್ಮೆ ಗಹಗಹಿಸುವ ಮುಗ್ಧ ರಸಿಕತೆ ..
ಭಕ್ತಿ- ಕರುಣ ರಸಘಟ್ಟಗಳಲ್ಲಿ ಹಾಡುತ್ತ ಮೈಮರೆಯುವ ಭಾವನಿರ್ಭರತೆ ..
ಭಕ್ತಿ - ಕರುಣ ರಸಗಳನ್ನು ಅರ್ಥಧಾರಿ ಮಾತಿನಿಂದ ಚಿತ್ರಿಸುವಾಗ -- ಹಸುಕಂದನಿಗೆ ಹಾಲೂಡುವ ಹೆತ್ತಬ್ಬೆಯಂತೆ ನಿಶ್ಚಲನಾಗಿರುವ ರಸತಾದಾತ್ಮ್ಯ ..
ರಂಗವೇರಿದ ಮೇಲೆ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಮರೆತೇಬಿಡುವ ಮನಃಪಾಕ ..
ಅಗ್ಗದ ಜನಪ್ರಿಯತೆಗೆ,ಹಣದ ಮೋಹಕ್ಕೆ ,ವಾಟ್ಸೇಪ್ ಲೈಕುಗಳಿಗೆ ತನ್ನನ್ನೆಂದೂ ಮಾರಿಕೊಳ್ಳದ ಗಾಯನ ಸಂಸ್ಕಾರ ..
ಇತ್ಯಾದಿ ಗುಣಗಣಗಳಿಂದ ನೀವು ಅತಿ ಶ್ರೀಮಂತರು ಭಾಗವತರೇ .
ಶ್ರೀ ಎಡನೀರು ಮೇಳದಲ್ಲಿ ನಿಮ್ಮೊಂದಿಗೆ ನಾನೂ ರಂಗವೇರಿದೆ. ಆ ಹತ್ತು ವರ್ಷಗಳು , ಶ್ರೀಮದೆಡನೀರಿನ ನಮ್ಮ ಸ್ವಾಮೀಜಿ, ನನಗೆ ಕೊಡಮಾಡಿದ ಮಹಾದಾನ .
ನನ್ನ ಬದುಕಿನ ಆ ಸುವರ್ಣ ಕಾಲದಲ್ಲಿ ನನಗೆ ತಿಳಿದಂತೆ ಕುಣಿದೆ - ಹಾರಿದೆ - ಹಾಡಿದೆ - ನಗಾಡಿದೆ - ಕಣ್ಣೀರಿಟ್ಟೆ .
ನಾನುಂಡ ಆ ರಂಗಸುಖಕ್ಕೆ, ಸವಿದ ವಾತ್ಸಲ್ಯಕ್ಕೆ ಪ್ರತಿಯಾಗಿ ನಾನೇನು ಕೊಟ್ಟೇನು !
ನಾನು ಬಡವ ಭಾಗವತರೇ.
ರಾಗತಾಳಗನ್ನರಿಯದ ಪಾಮರನ ನಾಡಿನರಗಳಲ್ಲೂ ಸಂಚರಿಸಿ,ಅವಾಚ್ಯ ಆನಂದವನ್ನು - ಸುಖದ ನೋವನ್ನೂ ಉಕ್ಕಿಸುವ , ನಿಮ್ಮ ಗಾಯನಗಂಗೆಯಲ್ಲಿ ಮಿಂದೇನು ಮಾತ್ರ.
ಕಲಾವಿದರನ್ನೂ ಕಲಾಸಕ್ತ ಶಿಷ್ಯರನ್ನೂತಾಯಿಯಾಗಿ ಪೋಷಿಸುವ , ತಂದೆಯಂತೆ ರಕ್ಷಿಸುವ ಶ್ರೀಮದೆಡನೀರು ಪಾದಂಗಳವರು - " ದಿನೇಶ ನಮ್ಮ ಶಿಷ್ಯ " ಎಂದಾಡಿದ ವಚನಮಾಲಿಕೆಯಿಂದ ಸಂಮಾನಿತರು ನೀವು -- ನಿಜಭಾಗ್ಯಶಾಲಿ.
ನಿಮಗೀಗ ಷಷ್ಟ್ಯಬ್ದಿ ಪೂರ್ತಿ .. ಅದು ನಮ್ಮ ಸಂಭ್ರಮ.
ನಮ್ಮ ಮನದಮನೆಯೊಳಗೆ ನಿಮಗಾಗಿ ಕಾದಿರುವ ಮನ್ನಣೆಯ ಮಣೆಯಿದೆ ..
ಮರೆಯದಿರಿ .
ಅಭಿವಾದನಗಳು.
ಪನೆಯಾಲ ರವಿ.
4 - 10 - 2019
Thursday, July 26, 2018
ಗ್ರಹಣ
ಬಾವಲಿಹಾರದ,ಗಾಳಿಬೀಸದ, ತೆಂಗು ತೂಗದ ನಿಶ್ಚಲ ನಿಶೆ . ಟಿಟ್ಟಿಭ ಕೂಡ ಕೂಗದ, ನೀರವ ಮೌನ.
ಆ ರಾತ್ರಿ -
ಚಂದ್ರಗ್ರಹಣ .
ಕರೆಜರಿದ ಜಗಲಿಯಲ್ಲಿ ತಾಯಿ ಕೂತಿದ್ದಳು - ಪುತ್ರರೊಂದಿಗೆ. ಆಗಲೂ ಅವಳ ಕೈ ಸುಮ್ಮಗಿರದೆ , ಹಣ್ಣಡಿಕೆಯನ್ನು ಗೊನೆಯಿಂದ ಬೇರ್ಪಡಿಸುತ್ತಿತ್ತು. ಕೆಲಸವೇ ಅವಳ ಬದುಕು .ಮಕ್ಕಳ ಬಾಯಿ ಮುಚ್ಚಿರಲಿಲ್ಲ .ಅವರಿಗೆ ಬೇರೆ ಕೆಲಸವೂ ಇರಲಿಲ್ಲ.
" ರಾಹುವಿನ ಕೈಗೆ ಸೋಲಾಗಲಿ..
ಚಂದ್ರನ ಕೈ ಮೇಲಾಗಲಿ ..."
ಎಂಬ ಮಂತ್ರವನ್ನು ತಾಯಿ ತಾನೂ ಪಠಿಸುತ್ತ , ಮಕ್ಕಳಲ್ಲೂ ಹೇಳಿಸುತ್ತಿದ್ದಳು.
ಅವರು ಚಂದಮಾಮನ ಬಿಡುಗಡೆಗಾಗಿ ಹಂಬಲಿಸುತ್ತಿದ್ದರು .ರಾಹು ಎಂಬ ಸರ್ಪ ತಿಂಗಳದೇವರನ್ನು ನುಂಗಿದರೆ ಗತಿಯೇನು ! ತಮ್ಮ ಮಂತ್ರಜಪ ಫಲಿಸುವ ಬಗ್ಗೆ ಅವರಿಗೇನೂ ಸಂದೇಹ ಇರಲಿಲ್ಲ .ಆದರೂ ಒಳಗಿಂದೊಳಗೆ ಸಣ್ಣ ಭೀತಿ. ಅಮ್ಮನಿಗೆ ಒತ್ತಿ ಕೂತು, ಆಗಾಗ ಮೇಲೆ ನೋಡುತ್ತಿದ್ದರು .
ಊಟ ಹೇಗೂ ಇಲ್ಲ - ಬಾನಿನಲ್ಲಿ ದೇವರು ಕಷ್ಟಪಡುವಾಗ ನಾವು ಉಣ್ಣಬಹುದೇ? ಇದ್ದ ಸ್ವಲ್ಪ ಮಜ್ಜಿಗೆಗೆ ತುಳಸಿಎಸಳು ಹಾಕಿ ಮುಚ್ಚಿಟ್ಟಾಗಿತ್ತು.
ಸಮಯ ಸರಿಯಿತು ..
ತಾಯಿಮಕ್ಕಳ ಮೇಲೆ..ಎದುರಿಗಿದ್ದ, ಸೆಗಣಿಸಾರಿಸಿದ ಅಂಗಳದ ಮೇಲೆ...ಎಲ್ಲೆಲ್ಲೂ - ಹಾಲಿನ ಮಳೆ!
ಹಾಲಿನಂಥಾ ಬೆಳದಿಂಗಳು .
ಪ್ರಾರ್ಥನೆ ಫಲಿಸಿತು .! ಗ್ರಹಣ ಮೋಕ್ಷ .
ಕಾಲಾಂತರದಲ್ಲಿ ಅವಳು, ಕಾಲಕ್ಕೆ ಬಲಿಯಾದಳು.ಎಷ್ಟೋ
ಮೈಲುಗಳಾಚೆ ಇದ್ದ ,ಚಂದ್ರಮನ ಬಿಡುಗಡೆಗಾಗಿ ಹಂಬಲಿಸಿದಾಕೆಯನ್ನು ಕಾಲರಾಹು ನುಂಗಿಹಾಕಿತು .
ಬೆಳೆದ ದೇಹದ ಬಾಲರು ಈಗಲೂ ಕಾಯುತ್ತಿದ್ದಾರೆ..
ಕಾಳಸರ್ಪ ಬಿಟ್ಟುಕೊಡುವ ಅಬ್ಬೆಗಾಗಿ..
ತಮ್ಮ ಕೆನ್ನೆ ಸವರುತ್ತಿದ್ದ , ಕಠಿಣ ಕೆಲಸದಿಂದ ಒರಟಾದ ಹಸ್ತಗಳಿಗಾಗಿ. ಆ ಕೈಗಳ ಮೃದುತ್ವಕ್ಕಾಗಿ .
ಹಣ್ಣಡಿಕೆ ಘಮ ಬೀರುವ ಆ ಕೈಗಳಿಗಾ ....
Sunday, August 20, 2017
ರಾತ್ರೆ ಗಂಟೆ ಹನ್ನೆರಡು ದಾಟಿತ್ತು. ಜಡಿ ಮಳೆ.ಗುಂಡಾಗುಂಡಿ ರಸ್ತೆ.ಆಟ ಮುಗಿಸಿ ಬರುವಾಗಿನ ಸುಸ್ತು - ಮಂಪರು.ಡ್ರೈವ್ ಮಾಡುವ ಸಹನೆಯೂ ಇರಲಿಲ್ಲ.
ಸಾಲದ್ದಕ್ಕೆ ಹೆಂಡತಿಯ ಮೆಸ್ಸೇಜ್ ತಲೆ ಕೊರೆಯುತ್ತಿತ್ತು..
ನಮ್ಮ ಮಗ..
ಹಗಲಿಡೀ ಕೆಮೆಸ್ಟ್ರಿ ಲ್ಯಾಬಿನಲ್ಲಿ ನಿಂತು ಕಾಲು ಸಿಡಿಯುತ್ತದಂತೆ.ನಾಳೆ ಯಾವದೋ ಟೆಸ್ಟು ಉಂಟು , ಓದಿ ಮುಗಿಸಲೇ ಬೇಕು. ಬೆಳಗ್ಗೆ ಮೂರು ಗಂಟೆಗೆ ಎಬ್ಬಿಸಬೇಕು.
ಇಷ್ಟೇ ಆದರೆ ಚಿಂತೆ ಇರ್ಲಿಲ್ಲ.ಮೊನ್ನೆ ಬೈಕಿಂದ ಬಿದ್ದು..ಮೊಣಕಾಲ ಸಿಪ್ಪೆ ಹೋಗಿ..ಕಾಲು ಮಡಚುವುದೇ ಕಷ್ಟ ಆಗಿದೆ ಅವನಿಗೆ.ಪೇಂಟು ಹಾಕಿದ್ರೆ ಗಾಯಕ್ಕೆ ಒರೆಸ್ತದೆ.ರೈನ್ಕೋಟು ಹಾಕಿದ್ರೆ ಅಂತೂ ಕತೆ ಕೈಲಾಸ !
ಮನೆ ಸೇರಿ ಮಿಂದು ಬಂದೆ.ಮಳೆ ನಿಂತಿತ್ತು.ಇವಳ ಸಣ್ಣ , ಸುಯ್ಲಿನಂಥಾ ಗೊರಕೆಯ ಶೃತಿ..
ಹೋಗಿ ಮಗನ ಬಳಿ ಮಲಗಿದೆ.ಹೊಡಚಾಡುತ್ತಲೇ ಇದ್ದಾನೆ.ನಿದ್ದೆಯ ಆಳಕ್ಕೆ ಇನ್ನೂ ಇಳಿದಿಲ್ಲ..
ಓರೆ ಮಲಗಿ ಅವನನ್ನು ಬಳಸಿ ಹಿಡ್ಕೊಂಡೆ.ಮಿಸುಕಾಡಿದ.
' ಭಟ್ಟಾ...ಏ ಭಟ್ಟಾ..' ಕರೆದೆ.ಹೂಂಗುಟ್ಟಿದ. ' ಕಾಲಿಗೆ ಎಣ್ಣೆ ಹಚ್ಬೇಕಾ..? '
ಬೇಡ ಹೇಳಿ ಕವುಚಿ ಮಲಗಿದ. ಫ್ಯಾನ್ ಐದರಲ್ಲಿಟ್ಟೆ - ನಂಗೆ ಚಳಿ ಆಗ್ತಿತ್ತು- ಆದರೆ ಅವನಿಗೆ ಅದೇ ಇಷ್ಟ ! ಮುಸುಕು ಹಾಕಿ ಕಣ್ಣು ಮುಚ್ಚಿಕೊಂಡೆ.
.... ಈ ಕಾಲುನೋವಿನಲ್ಲಿ.. ಸರಿಗಟ್ಟು ನಿದ್ದೆಯೂ ಇಲ್ಲದೆ , ಇವ ಪರೀಕ್ಷೆಗೆ ಬರೀಲಿಕ್ಕೆ ಉಂಟಾ ! ಅಡ್ಡಬಂದ ನಾಯಿ ಹಾಳಾಗಿ ಹೋಗ್ಲಿಕ್ಕೆ.. ಸಾವಿರಸಲ ಹೇಳಿದ್ದೇನೆ - ಸ್ವಲ್ಪ ಜಾಗ್ರತೆಯಲ್ಲ್ಲಿ ಬೈಕು ಬಿಡ್ಳಿಕ್ಕೆ ಇವನಿಗೇನು ಸಂಕಟ ...
ನಿದ್ದೆಗೆ ಜಾರಿದ್ದು ನನಗೇ ಗೊತ್ತಾಗಲಿಲ್ಲ..
ಭಾಗವತಿಗೆ ಕೇಳಿ ದಡಕ್ಕನೆ ಎಚ್ಚರ ಆಯ್ತು..
ಎಚ್ಚರಿಸಿದ್ದು ಅಲಾರಮ್ !
ಇವನ ಅಲಾರಂ , ರಿಂಗ್ಟೋನ್ ಎಲ್ಲ ಅಮ್ಮಣ್ಣಾಯರ ಪದ್ಯವೇ !
ಗಂಟೆ ಮೂರು ... ಮಗನಿಗೆ ಒಳ್ಳೆ ನಿದ್ದೆ. ಎಬ್ಬಿಸ್ಬೇಕಲ್ಲ.. ಬಿದ್ದ ನೋವು , ನಿನ್ನೆಯ ಆಯಾಸ , ಮಲಗಿದ್ದು ತಡವಾಗಿ , ಬಾರದ ನಿದ್ದೆ... ಹೇಗಪ್ಪಾ ..
ಪಾಪ - ಪುಣ್ಯ ನೋಡಿದ್ರೆ ,ಓದಿ ಆಗ್ಬೇಡ್ವಾ.. ಪರೀಕ್ಷೆ ಉಂಟಲ್ಲ್ವಾ..!
ಎಬ್ಬಿಸಿದೆ.
ದಡಕ್ಕನೆ ಎದ್ದು ಕೂತ.!
ಪರೀಕ್ಷೆ ತಲೆಬಿಸಿ ಜೋರುಂಟು .. ಗಟ್ಟಿಗ ಮಾಣಿ ಅಂತ ನಂಗೆ ಕುಷಿ ಆಯ್ತು.
ನನ್ನ ಮುಸುಕು ಸರಿಸಿ ಅವ ಹೇಳಿದ್ದೆಂತ ಗೊತ್ತುಂಟಾ...
" ಅಪ್ಪಾ ನಾವೊಂದು ' ಪ್ಯಾಶನ್ ಪ್ರೋ ತೆಗವನಾ...? "