Sunday, August 20, 2017

    ನಿದ್ದೆ ಬಾರದ ರಾತ್ರಿ..

ರಾತ್ರೆ ಗಂಟೆ ಹನ್ನೆರಡು ದಾಟಿತ್ತು. ಜಡಿ ಮಳೆ.ಗುಂಡಾಗುಂಡಿ ರಸ್ತೆ.ಆಟ ಮುಗಿಸಿ ಬರುವಾಗಿನ ಸುಸ್ತು - ಮಂಪರು.ಡ್ರೈವ್ ಮಾಡುವ ಸಹನೆಯೂ ಇರಲಿಲ್ಲ.
 ಸಾಲದ್ದಕ್ಕೆ ಹೆಂಡತಿಯ ಮೆಸ್ಸೇಜ್ ತಲೆ ಕೊರೆಯುತ್ತಿತ್ತು..
 ನಮ್ಮ ಮಗ..
ಹಗಲಿಡೀ ಕೆಮೆಸ್ಟ್ರಿ ಲ್ಯಾಬಿನಲ್ಲಿ ನಿಂತು ಕಾಲು ಸಿಡಿಯುತ್ತದಂತೆ.ನಾಳೆ ಯಾವದೋ ಟೆಸ್ಟು ಉಂಟು , ಓದಿ ಮುಗಿಸಲೇ ಬೇಕು. ಬೆಳಗ್ಗೆ ಮೂರು ಗಂಟೆಗೆ ಎಬ್ಬಿಸಬೇಕು.
  ಇಷ್ಟೇ ಆದರೆ ಚಿಂತೆ ಇರ್ಲಿಲ್ಲ.ಮೊನ್ನೆ ಬೈಕಿಂದ ಬಿದ್ದು..ಮೊಣಕಾಲ ಸಿಪ್ಪೆ ಹೋಗಿ..ಕಾಲು ಮಡಚುವುದೇ ಕಷ್ಟ ಆಗಿದೆ ಅವನಿಗೆ.ಪೇಂಟು ಹಾಕಿದ್ರೆ ಗಾಯಕ್ಕೆ ಒರೆಸ್ತದೆ.ರೈನ್ಕೋಟು ಹಾಕಿದ್ರೆ ಅಂತೂ ಕತೆ ಕೈಲಾಸ !
 ಮನೆ ಸೇರಿ ಮಿಂದು ಬಂದೆ.ಮಳೆ ನಿಂತಿತ್ತು.ಇವಳ ಸಣ್ಣ , ಸುಯ್ಲಿನಂಥಾ ಗೊರಕೆಯ ಶೃತಿ..
ಹೋಗಿ ಮಗನ ಬಳಿ ಮಲಗಿದೆ.ಹೊಡಚಾಡುತ್ತಲೇ ಇದ್ದಾನೆ.ನಿದ್ದೆಯ ಆಳಕ್ಕೆ ಇನ್ನೂ ಇಳಿದಿಲ್ಲ..
  ಓರೆ ಮಲಗಿ ಅವನನ್ನು ಬಳಸಿ ಹಿಡ್ಕೊಂಡೆ.ಮಿಸುಕಾಡಿದ.
' ಭಟ್ಟಾ...ಏ ಭಟ್ಟಾ..' ಕರೆದೆ.ಹೂಂಗುಟ್ಟಿದ. ' ಕಾಲಿಗೆ ಎಣ್ಣೆ ಹಚ್ಬೇಕಾ..? '
ಬೇಡ ಹೇಳಿ ಕವುಚಿ ಮಲಗಿದ. ಫ್ಯಾನ್ ಐದರಲ್ಲಿಟ್ಟೆ - ನಂಗೆ ಚಳಿ ಆಗ್ತಿತ್ತು- ಆದರೆ ಅವನಿಗೆ ಅದೇ ಇಷ್ಟ ! ಮುಸುಕು ಹಾಕಿ ಕಣ್ಣು ಮುಚ್ಚಿಕೊಂಡೆ.
.... ಈ ಕಾಲುನೋವಿನಲ್ಲಿ.. ಸರಿಗಟ್ಟು ನಿದ್ದೆಯೂ ಇಲ್ಲದೆ , ಇವ ಪರೀಕ್ಷೆಗೆ ಬರೀಲಿಕ್ಕೆ ಉಂಟಾ ! ಅಡ್ಡಬಂದ ನಾಯಿ ಹಾಳಾಗಿ ಹೋಗ್ಲಿಕ್ಕೆ.. ಸಾವಿರಸಲ ಹೇಳಿದ್ದೇನೆ - ಸ್ವಲ್ಪ ಜಾಗ್ರತೆಯಲ್ಲ್ಲಿ  ಬೈಕು ಬಿಡ್ಳಿಕ್ಕೆ ಇವನಿಗೇನು ಸಂಕಟ ...
 ನಿದ್ದೆಗೆ ಜಾರಿದ್ದು ನನಗೇ ಗೊತ್ತಾಗಲಿಲ್ಲ..
ಭಾಗವತಿಗೆ ಕೇಳಿ ದಡಕ್ಕನೆ ಎಚ್ಚರ ಆಯ್ತು..
ಎಚ್ಚರಿಸಿದ್ದು ಅಲಾರಮ್ !
 ಇವನ ಅಲಾರಂ , ರಿಂಗ್ಟೋನ್ ಎಲ್ಲ ಅಮ್ಮಣ್ಣಾಯರ ಪದ್ಯವೇ !
  ಗಂಟೆ ಮೂರು ... ಮಗನಿಗೆ ಒಳ್ಳೆ ನಿದ್ದೆ. ಎಬ್ಬಿಸ್ಬೇಕಲ್ಲ.. ಬಿದ್ದ ನೋವು , ನಿನ್ನೆಯ ಆಯಾಸ , ಮಲಗಿದ್ದು ತಡವಾಗಿ , ಬಾರದ ನಿದ್ದೆ... ಹೇಗಪ್ಪಾ ..
ಪಾಪ - ಪುಣ್ಯ ನೋಡಿದ್ರೆ ,ಓದಿ ಆಗ್ಬೇಡ್ವಾ.. ಪರೀಕ್ಷೆ ಉಂಟಲ್ಲ್ವಾ..!
ಎಬ್ಬಿಸಿದೆ.
ದಡಕ್ಕನೆ ಎದ್ದು ಕೂತ.!
ಪರೀಕ್ಷೆ ತಲೆಬಿಸಿ ಜೋರುಂಟು .. ಗಟ್ಟಿಗ ಮಾಣಿ ಅಂತ ನಂಗೆ ಕುಷಿ ಆಯ್ತು.
ನನ್ನ ಮುಸುಕು ಸರಿಸಿ ಅವ ಹೇಳಿದ್ದೆಂತ ಗೊತ್ತುಂಟಾ...

   " ಅಪ್ಪಾ ನಾವೊಂದು ' ಪ್ಯಾಶನ್ ಪ್ರೋ ತೆಗವನಾ...? "